Thursday, January 24, 2013

ಮಾಘ ಸ್ನಾನ ಸಂಕಲ್ಪ


|| ಶ್ರೀಶಂವಂದೆ ||


            ಪುಷ್ಯ ಮಾಸದ ದಶಮಿ ಅಥವಾ ಪೂರ್ಣಿಮೆಯಂದು ಮಾಘಸ್ನಾನವು ಪ್ರಾರಂಭವಾಗುತ್ತದೆ. ಮಾಘ ಮಾಸದ ದಶಮಿ ಅಥವಾ ಪೂರ್ಣಿಮಾದವರೆಗೆ (೧)ಒಂದುತಿಂಗಳ ಪರ್ಯಂತವಾಗಿ ಅರುಣೋದಯಕಾಲದಲ್ಲಿಯಾಗಲಿ ಪ್ರಾತಕ್ಕಾಲದಲ್ಲಾಗಲಿ, ನದ್ಯಾದಿಗಳಲ್ಲಿ ಸ್ನಾನ ಮಾಡಬೆಕು. ಸೂರ್ಯನು ಸ್ವಲ್ಪ ಉದಯಿಸಿದಾಗ ಸ್ನಾನ ಮಾಡುವ ಯಾವ ಬ್ರಹ್ಮಘ್ನನನ್ನು, ಸುರಾಪಾನೀಯನನ್ನು ಪವಿತ್ರ ಮಾಡೋಣವೆಂದು ಜಲಾಭಿಮಾನಿ ದೇವತೆಗಳು ಕೊಗುತ್ತಿರುತ್ತಾರೆ.            

  ಸ್ನಾನ ಕಾಲ -
              ನಕ್ಷತ್ರ ಇರುವಾಗಲೇ ಮಾಡುವ ಸ್ನಾನ ಉತ್ತಮ,
               ನಕ್ಷತ್ರ ಕಾಣದಿರುವಾಗ ಮಾಡುವ ಸ್ನಾನ ಮಧ್ಯಮ,
               ಸೂರ್ಯೋದಯದ ನಂತರ ಮಾಡುವ ಸ್ನಾನ ಕನಿಷ್ಟವಾದುದು.


  ಸ್ನಾನಾಧಿಕಾರಿಗಳು -
ಬ್ರಹ್ಮಚಾರಿಗಳು, ಗ್ರಹಸ್ತರು, ವಾನಪ್ರಸ್ತರು, ಭಿಕ್ಷುಕರು, ಬಾಲ ವ್ರದ್ಧ ಯುವಕರು, ನಾರಿ-ನಪುಂಸಕರೂ ಮಾಘಸ್ನಾನವನ್ನು ಮಾಡಬೆಕು.

  ಫಲ -
ಮಾಘ ಮಾಸದಲ್ಲಿ ಮನೆಯ ಹೊರಗೆ ಎಲ್ಲಿನಿರಿದೆಯೋ ಅದೆಲ್ಲವೂ ಗಂಗಾಜಲಕ್ಕೆ ಸಮಾನವಾಗಿರುತ್ತದೆ. ಪ್ರಯಾಗ, ನೈಮಿಷಾರಣ್ಯ ಮುಂತಾದ ಕ್ಷೇತ್ರಗಳಲ್ಲಿಮಾಡಿದ ಸ್ನಾನ ಹೆಚ್ಚಿನ ವಿಶೇಷ ಫಲವನ್ನು ಕೊಡುತ್ತದೆ. ಮಾಘಸ್ನಾನವೇ ಅತ್ಯಂತ ಪುಣ್ಯ ಸಂಪಾದಕವಾಗಿದೆ. ಅದರಲ್ಲೂ ಮಕರದಲ್ಲಿ ರವಿಯು ಪ್ರವೇಶಮಾಡಿದ್ದರೆ ಸಾವಿರಪಟ್ಟು ಫಲವು ಗಂಗಾಸ್ನಾನ ಮಾತ್ರದಿಂದ ಪ್ರಾಪ್ತವಾಗುವದು.

                  ಮಾಘಮಾಸಮಿಮಂ ಪೂರ್ಣಂ ಸ್ನಾಸ್ಯೇಹಂ ದೇವ ಮಾಧವ |
                  ತೀರ್ಥಸ್ಯಾಸ್ಯ ಜಲೇ ನಿತ್ಯಮಿತಿ ಸಂಕಲ್ಪ್ಯ ಚೇತಸಿ ||


                ಈ ರೀತಿಯಾಗಿ ಆರಂಭದಲ್ಲಿ  ದಶಮಿ ದಿನದಂದು ವಿಧಿಪೂರ್ವಕವಾಗಿ, ಮಾನಸಿಕವಾಗಿ, ”ಮಾಧವನೇ, ಮಾಘಮಾಸಪೊರ್ತಿ ಈ ತೀರ್ಥಜಲದಲ್ಲಿ ಸ್ನಾನಮಾಡುವೆನು" ಎಂದು ಸಂಕಲ್ಪಿಸಬೆಕು. 
                                 ಮಾಘ ಸ್ನಾನ ಸಂಕಲ್ಪ

ಆಚಮ್ಯ......, ಪ್ರಾಣಾಯಾಮ್ಯ....., ಏವಂಗುಣ ವಿಶಿಷ್ಠಾಯಾಂ, ಶುಭತಿಥೌ ಶ್ರೀ ಭಾರತಿರಮಣ ಮುಖ್ಯ ಪ್ರಾಣಾಂತರ್ಗತ ಶ್ರೀ ಮಾಸ ನಿಯಾಮಕ ಮಾಧವ ಪ್ರೇರಣಯಾ ಶ್ರೀ ಮಾಧವ ಪ್ರಿತ್ಯರ್ಥಂ, ಹರೌ ಜ್ನಾನ ಭಕ್ತ್ಯಾದಿ ಸಿಧ್ಯರ್ಥಂ ಮಾಘಸ್ನಾನಮಹಂ ಕರಿಷ್ಯ.

                                      ಪ್ರಾರ್ಥನ

                 ಮಕರಸ್ತೇ ರವೌ ಮಾಘೇ ಗೋವಿಂದಾಚ್ಯುತಮಾಧವ |
                 ಸ್ನಾನೇನಾನೇನ ಮೇ ದೇವ ಯಥೋಕ್ತಫಲದೋ ಭವ ||
                 ಕೃಷ್ಣಾಚ್ಯುತ ನಿಮಜ್ಯಾಮಿ ಪ್ರಭಾತೇಸ್ಮಿನ್ ಶುಭೋದಕೇ |
                 ಆನೇನ ಮಾಘಸ್ನಾನೇನ ಸುಪ್ರೀತೋ ಮಾಂ ಸಮುದ್ಧರ ||


ಜಲದಲ್ಲಿ ಮುಳುಗಿ ಸ್ನಾನ ಮಾಡಿ ಮೃತ್ತಿಕೆಯನ್ನು ಧರಿಸಿ ಫುನ ಮುಳುಗಿ ನಂತರ ಅರ್ಘ್ಯವನ್ನು ಕೊಡಬೇಕು.

ಮಾಧವನಿಗೆ ಅರ್ಘ್ಯ_

                    ತಪಸ್ಯರ್ಕೋದಯೇ ನದ್ಯಾಂ ಸ್ನಾತೋಹಂ ವಿಧಿಪೊರ್ವಕಂ|
                    ಮಾಧವಾಯ ದದಾಮೀದಮರ್ಘ್ಯಂ ಸಮ್ಯಕ್ ಪ್ರಸೀದತು ||
                    ಮಾಧವಾಯ ನಮ: ಇದಮರ್ಘ್ಯಂ |


ಸೂರ್ಯನಿಗೆ ಅರ್ಘ್ಯ_

                  ಸವಿತ್ರೇ ಪ್ರಸವಿತ್ರೇ ಚ ಪರಂ ಧಾಮ್ನೇ ನಮೋಸ್ತುತೇ |
                  ತ್ವತ್ತೇಜಸಾ ಪರಿಭ್ರಷ್ಟಂ ಪಾಪಂ ಯಾತು ಸಹಸ್ರಧಾ ||
                  ಸವಿತ್ರೇ ನಮ: ಇದಮರ್ಘ್ಯಂ

                  ದಿವಾಕರ ಜಗನ್ನಾಥ ಪ್ರಭಾಕರ ನಮೋಸ್ತುತೇ |
                  ಪರಿಪೂರ್ಣಂ ಕುರುಷ್ವೇದಂ ಮಾಘಸ್ನಾನಂ ಮಯಾ ಕೃತಂ
||



ಸಂಗ್ರಹ -
ಶ್ರೀ ಗುರುರಾಜಾಚಾರ್ಯ ಕೃ. ಪುಣ್ಯವಂತ.
ಹುಬ್ಬಳ್ಳಿ.
9448215151
 

Monday, January 21, 2013

ಶ್ರೀಮದ್ಭಾಗವತದಲ್ಲಿ ಭಗವಂತನ ಅವತಾರಗಳು -4,5,6


...(ಮುಂದುವರೆದ ಭಾಗ)
    
     ಈಗ ನಾವು ಸ್ವಾಯಂಭುವ ಮನ್ವಂತರದಲ್ಲಿ ಆದ ಅವತಾರಗಳ ಬಗ್ಗೆ ನೋಡುತ್ತಿದ್ದೇವೆ. ನಾವು ವಿಶೇಷವಾಗಿ ಗಮನಿಸಬೇಕಾದ ಅಂಶವೆಂದರೆ ಅವತಾರಗಳಲ್ಲಿ ಭಗವಂತನು  ಹೊಂದಿರುವ ಹೆಸರುಗಳನ್ನೇ ಇಟ್ಟುಕೊಂಡಿರುವ ಕೆಲವು ಋಷಿಗಳು ಸಹ ಇದ್ದಾರೆ. ಮೂರನೆ ಅವತಾರವಾದ ಐತರೇಯನ ಹೆಸರನ್ನೇ ಹೊಂದಿರುವ ಒಬ್ಬ ಋಷಿ ಇದ್ದಾನೆ. ಈ ಋಷಿ ತಪಸ್ಸುಮಾಡಿ ಭಗವಂತನ ಹೆಸರು ಮತ್ತು ಅವನ ತಾಯಿಯ ಹೆಸರುಗಳೇ ತನಗೂ ಮತ್ತು ತನ್ನ ತಾಯಿಗೂ ಇರಬೇಕೆಂದು ಬೇಡಿಕೊಂಡಿದ್ದನಂತೆ. ಆದುದರಿಂದ ಇತರಾದೇವಿಯ ಮಗ ಐತರೇಯ ಎಂಬ ಭಗವಂತನ ಅವತಾರವಿದೆ ಹಾಗೆ ಇತರಾದೇವಿಯ ಮಗ ಐತರೇಯ ಎಂಬ ಒಬ್ಬ ಋಷಿಯೂ ಇದ್ದಾನೆ. ಅದೇ ರೀತಿ ಕಪಿಲ ಎಂಬ ಹೆಸರಿನ ಭಗವಂತನ ಅವತಾರವಿದೆ, ಕಪಿಲ ಎಂಬ ಒಬ್ಬ ಋಷಿಯೂ ಇದ್ದಾನೆ. ಇಲ್ಲಿ ಇಬ್ಬರ ತಾಯಿ ಬೇರೆ ಬೇರೆ ಆದರೆ ಇಬ್ಬರ ಶಿಷ್ಯರ ಹೆಸರು ಒಂದೆ. ಆಸುರಿ ಎಂದು. ಇಬ್ಬರೂ ಕಪಿಲರು ಬೋಧಿಸಿದ ಶಾಸ್ತ್ರ ಸಾಂಖ್ಯ ಶಾಸ್ತ್ರ. ಆದರೆ ಭಗವಂತನ ಅವತಾರವಾದ ಕಪಿಲ ಬೋಧಿಸಿದ್ದು ಭಗವಂತನ ಜ್ಞಾನದ ಬಗ್ಗೆ. ಆದರೆ ಇನ್ನೊಬ್ಬ ಕಪಿಲ ಬೋಧಿಸಿದ್ದು ನಿರೀಶ್ವರ ಸಾಂಖ್ಯಮತ. ಅದಕ್ಕಾಗಿ ಗೊಂದಲ ನಿವಾರಣೆಗಾಗಿ ಭಗವಂತನ ಅವತಾರವನ್ನು  '' ಕಪಿಲ ವಾಸುದೇವ  '' ಎಂದು ಕರೆದರು. ದೇವಕಿಯಮಗ ಕೃಷ್ಣ ಎಂಬ ಪ್ರಸಿದ್ಧವಾದ ಭಗವಂತನ ಅವತಾರವಿದೆ ಹಾಗೆ ದೇವಕಿಯಮಗ ಕೃಷ್ಣ ಎಂಬ ಒಬ್ಬ ಋಷಿಯೂ  ಇದ್ದಾನೆ.  ಈಗ ನಾವು ಭಗವಂತನ ನಾಲ್ಕನೇ ಅವತಾರದ ಬಗ್ಗೆ ನೋಡೋಣ.


ನಾಲ್ಕನೇ ಅವತಾರ

ತುರ್ಯೇ ಧರ್ಮಕಲಾಸರ್ಗೇ ನರನಾರಾಯಣೌ ಋಷೀ |
     ಭೂತ್ವಾತ್ಮೋಪಶಮೋಪೇತಮಕರೋದ್ದುಶ್ಚರಂ ತಪಃ  ||
     
 --ಭಾಗವತ:- 1-3-9                        
                                                                       
    
ಸ್ವಾಯಂಭುವಮನುವಿನ ಭಾಗ್ಯ ಬಹಳ ದೊಡ್ಡದು.  ಸ್ವಾಯಂಭುವಮನುವಿನ ಮನೆತನದಲ್ಲಿ ಭಗವಂತನ ಅವತಾರಗಳ ಸರಮಾಲೆಯೇ ಇದೆ. ಸ್ವಾಯಂಭುವಮನುವಿಗೆ ಮೂರು ಜನ ಹೆಣ್ಣುಮಕ್ಕಳು. (1) ಆಕೂತಿ; (2) ದೇವಹೂತಿ; ಮತ್ತು (3) ಪ್ರಸೂತಿ. ಪ್ರಸೂತಿಯನ್ನು ದಕ್ಷಪ್ರಜಾಪತಿ ಮದುವೆ ಮಾಡಿಕೊಂಡ. ಪ್ರಸೂತಿಯಲ್ಲಿ ಹತ್ತು ಜನ ಹೆಣ್ಣುಮಕ್ಕಳು ಹುಟ್ಟಿದರು. ಅವರಲ್ಲಿ ಕೊನೆಯವಳು ಮೂರ್ತಿ ಅಂತ. ಅವಳನ್ನು ಧರ್ಮದೇವತೆ ಮದುವೆ ಮಾಡಿಕೊಂಡ. ಮೂರ್ತಿಯಲ್ಲಿ ನಾಲ್ಕು ಜನ ಗಂಡುಮಕ್ಕಳು ಜನಿಸಿದರು. (1)ನರ; (2)ನಾರಾಯಣ; (3) ಹರಿ; ಮತ್ತು (4) ಕೃಷ್ಣ. ಇವರಲ್ಲಿ ನರ ಎಂದರೆ ಶೇಷ. ಶೇಷನಲ್ಲಿ ಭಗವಂತನ ವಿಶೇಷ ಆವೇಶ. ಇನ್ನು ಉಳಿದ ಮೂರು ರೂಪಗಳು ಭಗವಂತನ ಅವತಾರಗಳು. ಇವುಗಳಲ್ಲಿ ಹರಿ ಮತ್ತು ಕೃಷ್ಣ ರೂಪಗಳನ್ನು ಭಾಗವತ ಹೇಳುವುದಿಲ್ಲ. ನಾರಾಯಣ ಭಗವಂತನ ರೂಪ. ನರ-ನಾರಾಯಣ ಋಷಿಗಳಲ್ಲಿ ನರ ಎಂದರೆ ಶೇಷ, ಅವನಲ್ಲಿ ಭಗವಂತನ ವಿಶೇಷ ಆವೇಶ. ನಾರಾಯಣ ಭಗವಂತ.

     ಇವರು, ಮನಸ್ಸನ್ನು ನಿಗ್ರಹಮಾಡಿಕೊಂಡು ದುಶ್ಚರವಾದ ತಪಸ್ಸನ್ನು ಹೇಗೆ ಆಚರಿಸುವುದು ಎಂಬುದನ್ನು ತಾವು ಆಚರಿಸಿ  ತೋರಿಸಿದರು. ಬದರಿಯಲ್ಲಿ ನರ-ನಾರಾಯಣ ಪರ್ವತಗಳಲ್ಲಿ ವಾಸಿಸುತ್ತಿದ್ದರು. ಶ್ರೀಮದಾಚಾರ್ಯರು ಬದರಿಕಾಶ್ರಮಕ್ಕೆ ಹೋದಾಗ, ವ್ಯಾಸಾಶ್ರಮಕ್ಕೆ, ನರ-ನಾರಾಯಣಾಶ್ರಮಕ್ಕೆ ಹೋಗಿ ಅವರುಗಳನ್ನು ಕಂಡು ತಮ್ಮ ಶಾಸ್ತ್ರ ರಚನೆಗೆ ಅನುಮತಿ ಪಡೆದುಕೊಂಡುಬಂದರೆಂದು ಮಧ್ವವಿಜಯದಲ್ಲಿ ಶ್ರೀಯುತ ನಾರಾಯಣಪಂಡಿತಾಚಾರ್ಯರು ತಿಳಿಸಿರುತ್ತಾರೆ.
     ಭಗವಂತ ತನ್ನ ಕೆಲವು ಅವತಾರಗಳನ್ನು ಅಂದರೆ ವರಾಹ, ನರ-ನಾರಾಯಣ, ಪರಶುರಾಮ ರೂಪಗಳನ್ನು ಇಂದಿಗೂಸಹ ಉಪಸಂಹಾರ ಮಾಡಿರುವುದಿಲ್ಲ. ಈಗಲೂಸಹ ಬದರಿಯಲ್ಲಿ ನರ-ನಾರಾಯಣ ಪರ್ವತದಲ್ಲಿ ನರ-ನಾರಾಯಣರು ತಪಸ್ಸು ಮಾಡುತ್ತಾ ಇದ್ದಾರೆ ಎಂದು ಜ್ಞಾನಿಗಳು ಹೇಳುತ್ತಾರೆ.
 
ಐದನೇ ಅವತಾರ

ಪಂಚಮಃ ಕಪಿಲೋನಾಮ ಸಿದ್ದೇಶಃ ಕಾಲವಿಪ್ಲುತಮ್|
             ಪ್ರೋವಾಚಾಸುರಯೇ ಸಾಂಖ್ಯಂ ತತ್ವಗ್ರಾಮವಿನಿರ್ಣಯಂ||     
ಭಾಗವತ:- 1-3-10                   
 
     ಸ್ವಾಯಂಭುವಮನುವಿನ ಇನ್ನೊಬ್ಬ ಮಗಳು ದೇವಹೂತಿಯನ್ನು ಕರ್ದಮ ಪ್ರಜಾಪತಿ ಮದುವೆ ಮಾಡಿಕೊಂಡಿದ್ದನು. ಆ ದೇವಹೂತಿಯಲ್ಲಿ ಭಗವಂತ ಕಪಿಲನಾಮಕನಾಗಿ ಅವತಾರ ಮಾಡಿದ. ಈ ಕಪಿಲನನ್ನು ಕಪಿಲ ವಾಸುದೇವ ಎಂದೂ ಸಹ ಕರೆಯುತ್ತಾರೆ. ಈ ರೂಪದಿಂದ ವಾಸುದೇವಕಪಿಲ ತನ್ನ ಶಿಷ್ಯ ಆಸುರಿ ಎನ್ನುವವನಿಗೆ ಸಾಂಖ್ಯ ಶಾಸ್ತ್ರವನ್ನು ಉಪದೇಶಿಸಿದ. ಅದಕ್ಕೂ ಮೊದಲು ಕಪಿಲ ತನ್ನ ತಾಯಿಯಾದ ದೇವಹೂತಿಗೆ ಸಾಂಖ್ಯ ಶಾಸ್ತ್ರವನ್ನು ಉಪದೇಶಿಸಿದ್ದ.  ಈ ಭಗವಂತ ಉಪದೇಶಿಸಿದ  ಸಾಂಖ್ಯಶಾಸ್ತ್ರಕ್ಕೆ ತಂತ್ರ ಸಾಂಖ್ಯ ಎಂದು ಕರೆಯುತ್ತಾರೆ. ಏಕೆಂದರೆ ಅದು ವೇದಾಧೀನವಾದ ಸಾಂಖ್ಯ ಅಂದರೆ ವೈದಿಕಸಾಂಖ್ಯ. ಇನ್ನೊಬ್ಬ, ಭಗವಂತನ ಅವತಾರವಲ್ಲದ, ಕಪಿಲ ಎಂಬ ಋಷಿಯೂ ಬೋಧಿಸಿದ ಶಾಸ್ತ್ರಕ್ಕೂ ಸಹ ಸಾಂಖ್ಯವೆಂದು ಹೆಸರು. ಆದರೆ ಅದು ನಿರೀಶ್ವರ ಸಾಂಖ್ಯ-ಅವೈದಿಕ ಸಾಂಖ್ಯ. ಈ ಭಗವಂತನ ಅವತಾರವಾದ ಕಪಿಲ ಸಿದ್ಧಪುರುಷರಿಗೆಲ್ಲ ಆಚಾರ್ಯಪರುಷನಾಗಿ ನಿಂತು ಕಾಲಗತಿಯಲ್ಲಿ ನಷ್ಟವಾಗಿಹೋಗಿದ್ದ ಸಾಂಖ್ಯ ಶಾಸ್ತ್ರವನ್ನು ತನ್ನ ಶಿಷ್ಯ ಆಸುರಿ ಮೂಲಕ ಜಗತ್ತಿಗೆ ಕೊಟ್ಟ ರೂಪ. ಇಡೀ ಆಧ್ಯಾತ್ಮತತ್ವವನ್ನು ಸಂಖೈಯ ಮೂಲಕ ತಿಳಿಸಿದ. ಪಂಚ ಕಮರ್ೇಂದ್ರಿಯಗಳು, ಪಂಚ ಜ್ಞಾನೇಂದ್ರಿಯಗಳು, ಪಂಚಭೂತಗಳು, ಪಂಚತನ್ಮಾತ್ರೆಗಳು ಮತ್ತು ಮನಸ್ಸು, ಬುದ್ಧಿ, ಅಹಂಕಾರ, ಚಿತ್ತ(5+5+5+5+4=24) ಈ ಇಪ್ಪತ್ನಾಲ್ಕು  ತತ್ವಗಳ ಒಳಗೆ ನಿಯಾಮಕನಾಗಿ ನಿಂತ ಭಗವಂತ ಇಪ್ಪತ್ತೈದನೇ ತತ್ವ ಎಂದು ಸಂಖೈಯ ಮೂಲಕ ನಿರೂಪಿಸಿದ.  ಸಾಂಖ್ಯಶಾಸ್ತ್ರವೆಂದರೆ  ಕೇವಲ ಸಂಖೈಯ ಮೂಲಕ ವಿಶ್ವವನ್ನ ತಿಳಿಸಿ ಕೊಡುವುದಷ್ಟೆಅಲ್ಲ. ಯಥಾರ್ಥವಾದ ಭಗವತ್ತತ್ವದ ಅರಿವಿಗೆ ಸಾಂಖ್ಯವೆಂದು ಹೆಸರು.  ಹೀಗೆ ಪ್ರಪಂಚದಲ್ಲಿ ಮೂಲಭೂತವಾದ ತತ್ವಗಳು ಎಷ್ಟು ಅಂತ ನಿರ್ಣಯ ಮಾಡುವ ಶಾಸ್ತ್ರವನ್ನು ತನ್ನ ಶಿಷ್ಯ ಆಸುರಿಯ ಮೂಲಕ ಜಗತ್ತಿಗೆ ಕೊಟ್ಟ ಅವತಾರ ಕಪಿಲಾವತಾರ.
ಆರನೆಯ ಅವತಾರ

ಷಷ್ಠೇ ಅತ್ರೇರಪತ್ಯತ್ವಂ ವೃತಃ ಪ್ರಾಪ್ತೋನಸೂಯಯಾ|
    ಅನ್ವೀಕ್ಷಿಕೀಮಲರ್ಕಾಯ ಪ್ರಹ್ಲಾದಾದಿಭ್ಯ ಊಚಿವಾನ್||     
ಭಾಗವತ:- 1-3-11                    
 
      ದೇವಹೂತಿಯಲ್ಲಿ ಭಗವಂತ ಕಪಿಲನಾಮಕನಾಗಿ ಅವತರಿಸುವುದಕ್ಕೂ ಮುನ್ನ ಅವಳಿಗೆ ಒಂಭತ್ತು ಜನ ಹೆಣ್ಣುಮಕ್ಕಳದ್ದರು. ಆ ಒಂಭತ್ತು ಜನರಲ್ಲಿ ಒಬ್ಬಳು ಅನುಸೂಯೆ.  ಅವಳನ್ನು ಅತ್ರಿ ಮಹರ್ಷಿ ಮದುವೆ ಮಾಡಿಕೊಂಡಿದ್ದ. ಈ ಅತ್ರಿ-ಅನುಸೂಯರ ಮಗನಾಗಿ ಮತ್ತೇ ಭಗವಂತನ ಅವತಾರ. ಅವನೇ ದತ್ತ.  ಅತ್ರಿಯ ಮಗನಾದುದರಿಂದ ದತ್ತಾತ್ರೇಯ ಎಂಬ ಹೆಸರಿನಿಂದ ಕರೆಯಲ್ಪಟ್ಟ ರೂಪ.

     ಅತ್ರಿ-ಅನುಸೂಯ ದಂಪತಿಗಳು, ಸೃಷ್ಟಿ-ಸ್ಥಿತಿ-ಸಂಹಾರಗಳ ನಿಯಾಮಕನಾದ ಭಗವಂತ ತಮ್ಮ ಮಗನಾಗಿ ಹುಟ್ಟಬೇಕೆಂದು ಪ್ರಾರ್ಥಿಸಿ  ತಪಸ್ಸು ಮಾಡಿದ್ದರು.  ಆದುದರಿಂದ ಭಗವಂತ ಅವರಲ್ಲಿ ಮೂರು ರೂಪಗಳಿಂದ ಹುಟ್ಟಬೇಕಾಯಿತು. ಏಕೆಂದರೆ ಭಗವಂತ ಬ್ರಹ್ಮನೊಳಗಿದ್ದು ಸೃಷ್ಟಿ ಕಾರ್ಯ ಮಾಡುತ್ತಾನೆ, ತಾನು ಸ್ವತಃ ವಿಷ್ಣು ಸ್ಠಿತಿಕಾರಕ,  ಶಿವನಲ್ಲಿದ್ದು ಸಂಹಾರ ಮಾಡುತ್ತಾನೆ. ಹೀಗಾಗಿ ಬ್ರಹ್ಮ-ವಿಷ್ಣು-ಮಹೇಶ್ವರರು ಅತ್ರಿ-ಅನುಸೂಯರ ಮಕ್ಕಳಾಗಿ ಹುಟ್ಟಿದರು. ವಿಷ್ಣು ತಾನು ದತ್ತನಾಗಿ ಅವತರಿಸಿದ; ಶಿವ ದೂರ್ವಾಸಮುನಿಯಾಗಿ ಅವತರಿಸಿದ; ಆದರೆ ಬ್ರಹ್ಮನಿಗೆ ಭೂಮಿಯಲ್ಲಿ ಜನ್ಮವಿಲ್ಲದಕಾರಣ ಚಂದ್ರನಲ್ಲಿ ಆವಿಷ್ಟನಾಗಿ, ಚಂದ್ರ ಮಗನಾಗಿ ಅವತರಿಸಿದ.

     ಇವರಲ್ಲಿ ವಿಷ್ಣು, ಅತ್ರಿ-ಅನುಸೂಯೆ ದಂಪತಿಗಳ ತಪಸ್ಸಿಗೆ ಮೆಚ್ಚಿ, ತನ್ನನ್ನು ತಾನು ದತ್ತ  ಅಂದರೆ ಕೊಟ್ಟುಕೊಂಡನಾದುದರಿಂದ ಅವನು ದತ್ತ.  ಅತ್ರಿಯ ಮಗನಾಗಿ ಹುಟ್ಟಿದ್ದರಿಂದ ದತ್ತಾತ್ರೇಯ.  ಹೆಸರೇ ದತ್ತಾತ್ರೇಯ ಅಲ್ಲ.
ಈಗ ನಮಗೆ ಸಾಮಾನ್ಯವಾಗಿ ಕಂಡುಬರುವ ದತ್ತಾತ್ರೇಯನ ಭಾವಚಿತ್ರ ಅಥವಾ ಕ್ಯಾಲೆಂಡರುಗಳಲ್ಲಿ ದತ್ತಾತ್ರೇಯನಿಗೆ ಮೂರು ತಲೆ- ಒಂದು ದೇಹ - ಒಂದು ಆಕಳು - ನಾಲ್ಕು ನಾಯಿಗಳನ್ನು ಚಿತ್ರೀಕರಿಸಲಾಗಿದೆ. ಈ ಚಿತ್ರ ಅಶಾಸ್ತ್ರೀಯವಾದುದು. ವಾಸ್ತವವಾಗಿ ದತ್ತಾತ್ರೇಯನಿಗೆ ಮೂರು ತಲೆಗಳಿರಲಿಲ್ಲ; ಒಂದೇ ತಲೆ ಇತ್ತು. ಅನುಸೂಯೆ ಮೂರು ಮಕ್ಕಳನ್ನು ಹೆತ್ತಿದ್ದಳು. ಮೂರು ಮಕ್ಕಳಿಗೆ ಬೇರೆ-ಬೇರೆಯಾಗಿ ಮೂರು ತಲೆಗಳಿದ್ದವು. ಒಂದೇ ದೇಹದ ಒಂದೇ ಕುತ್ತಿಗೆಯಮೇಲೆ ಮೂರು ತಲೆಗಳಿರಲಿಲ್ಲ.  ಈ ಚಿತ್ರವನ್ನು ಯಾರೋ ಆರ್ವಾಚೀನ ಚಿತ್ರಗಾರರು ಕಲ್ಪಿಸಿಕೊಂಡು ಬರೆದ ಚಿತ್ರ. ಇದಕ್ಕೆ ಕಾರಣ ಏನೆಂದರೆ, ದತ್ತಾತ್ರೇಯ ಪಂಥ ಅಂತ ಒಂದು ಪಂಥವಿದೆ. ಆ ಪಂಥದವರು ಭಾಗವತ ಸಂಪ್ರದಾಯದವರು.  ಅವರ ಪ್ರಕಾರ ಬ್ರಹ್ಮ-ವಿಷ್ಣು-ಶಿವ ಈ ಮೂವರು ಬೇರೆಯಲ್ಲ. ಎಲ್ಲರೂ ಒಂದೆ. ಬ್ರಹ್ಮನೇ ವಿಷ್ಣು; ವಿಷ್ಣುವೇ ಶಿವ. ಅಭೇದೋಪಾಸನೆ.  ಹೀಗಾಗಿ ಮೂರು ತಲೆಗಳಿರುವ ಒಂದೇ ದೇವತೆಯನ್ನು ಕಲ್ಪಿಸಿಕೊಂಡು ರಚಿಸಲಾದ ಚಿತ್ರ. ಆದರೇ ಕೇವಲ ಭಾಗವತದಲ್ಲಿ ಮಾತ್ರವಲ್ಲ, ಬೇರೆ ಯಾವುದೇ ಪುರಾಣಗಳಲ್ಲಿಯೂ ಸಹ ಮೂರು ತಲೆಗಳುಳ್ಳ ದತ್ತಾತ್ರೇಯನ ಉಲ್ಲೇಖ ಬಂದಿರುವುದಿಲ್ಲ.  ಇಷ್ಟೇ ಅಲ್ಲದೆ, ತ್ರಿಮೂರ್ತಿಗಳು ಅನುಸೂಯೆಯನ್ನು ಪರೀಕ್ಷಿಸಲೋಸುಗ ಬತ್ತಲಾಗಿ ಹಾಲುಕುಡಿಸುವಂತೆ ಕೇಳಿದರು, ಅನುಸೂಯೆ ತ್ರಿಮೂರ್ತಿಗಳನ್ನು ಚಿಕ್ಕ ಮಕ್ಕಳನ್ನಾಗಿ ಮಾಡಿ ಹಾಲು ಕುಡಿಸಿದಳು ಎಂಬ ಇನ್ನು ಅನೇಕ ಕಥೆಗಳು ಕೇವಲ ಸುಳ್ಳು ಕಥೆಗಳು. ಯಾವುದೇ ಶಾಸ್ತ್ರೀಯ ಆಧಾರಗಳಿಲ್ಲ.


     ಈ ರೂಪದಿಂದ ಭಗವಂತ ಅಲರ್ಕ - ಪ್ರಹ್ಲಾದಾದಿಗಳಿಗೆ ಬ್ರಹ್ಮ ಜ್ಞಾನವನ್ನು ಊಪದೇಶಿಸಿದ.
 
                                                                         ಮುಂದುವರೆಯುವದು.......
 
ಕೆ. ಸತ್ಯನಾರಾಯಣರಾವ್,
ಈಶವಾಶ್ಯಂ, #1361, ವಿವೇಕಾನಂದನಗರ,
ಸಂಡೂರು ರಸ್ತೆ, ಹೊಸಪೇಟೆ-583 203.
 

Friday, January 11, 2013

ಸಂಕ್ರಮಣ

ಅಪಮೃತ್ಯು ಪರಿಹರಿಸುವ ಮಕರ ಸಂಕ್ರಮಣ

 ರವಿಯು ಮೇಷಾದಿರಾಶಿಗಳಲ್ಲಿ ಸಂಚರಿಸುವ ಹನ್ನೆರಡು ತಿಂಗಳುಗಳ ಕಾಲವನ್ನು ಸಂಕ್ರಮಣ ಎಂದು ಕರೆಯುವರು. ರವಿಯು ದಿನವೊಂದಕ್ಕೆ ಒಂದು ಭಾಗ ಮಾತ್ರ ಸಂಚರಿಸುವವನಾಗಿ ಒಂದು ರಾಶಿಯಲ್ಲಿ ಒಂದು ತಿಂಗಳವರೆಗೆ ಇರುವನು. ಹೀಗೆ ರವಿಯು ಒಂದೊಂದು ರಾಶಿಯನ್ನು ನಿರ್ದಿಷ್ಟವಾದ ದಿನಾಂಕದಂದು ಪ್ರವೇಶಿಸುತ್ತಾನೆ. ಅಂದರೆ ಮೇಷ ರಾಶಿಯನ್ನು ಏಪ್ರಿಲ್ ತಿಂಗಳ 13-14ರಂದು ಪ್ರವೇಶಿಸುವನು. ವೃಷಭರಾಶಿಯನ್ನು ಮೇ 14-15ರಂದು ಪ್ರವೇಶಿಸುವನು. ಮಿಥುನ ರಾಶಿಯನ್ನು ಜೂನ್ 14-15ರಂದು, ಕಟಕ ರಾಶಿಯನ್ನು ಜುಲೈ 16- 17ರಂದು, ಸಿಂಹ ರಾಶಿಯನ್ನು ಆಗಸ್ಟ್ 16-17ರಂದು, ಕನ್ಯಾ ರಾಶಿಯನ್ನು ಸೆಪ್ಟೆಂಬರ್ 16- 17ರಂದು, ತುಲಾ ರಾಶಿಯನ್ನು ಅಕ್ಟೋಬರ್ 16-17ರಂದು, ವೃಶ್ಚಿಕ ರಾಶಿಯನ್ನು ನವೆಂಬರ್ 15-16ರಂದು, ಧನು ರಾಶಿಯನ್ನು ಡಿಸೆಂಬರ್ 15-16 ರಂದು, ಮಕರ ರಾಶಿಯನ್ನು ಜನವರಿ 13-14ರಂದು, ಕುಂಭ ರಾಶಿಯನ್ನು ಫೆಬ್ರವರಿ 12-13ರಂದು, ಮೀನ ರಾಶಿಯನ್ನು ಮಾರ್ಚ್ 14-15ರಂದು ಪ್ರವೇಶಿಸುವನು.
 ರವಿಯು ಕಟಕದಿಂದ ಧನು ರಾಶಿಯಲ್ಲಿ ಸಂಚರಿಸುವ ಸಮಯವನ್ನು ದಕ್ಷಿಣಾಯಣವೆಂದೂ, ಮಕರದಿಂದ ಮಿಥುನರಾಶಿಯಲ್ಲಿ ಸಂಚರಿಸುವ ಸಮಯವನ್ನು ಉತ್ತರಾಯಣವೆಂದೂ ಕರೆಯುತ್ತಾರೆ.

ದಕ್ಷಿಣಾಯಣ
 ರವಿಯು ಭೂಮಧ್ಯರೇಖೆಗೆ ದಕ್ಷಿಣಾಭಿಮುಖವಾಗಿ ಸಂಚರಿಸುವ ಕಾಲ ದಕ್ಷಿಣಾಯಣ. ಇದು ಸಾಮಾನ್ಯವಾಗಿ ಶ್ರಾವಣ ಮಾಸದಿಂದ ಪ್ರಾರಂಭವಾಗಿ ಪುಷ್ಯಮಾಸದವರೆಗೆ ಇರುತ್ತದೆ.

ಉತ್ತರಾಯಣ
 ರವಿಯು ಭೂಮಧ್ಯರೇಖೆಗೆ ಉತ್ತರಾಭಿಮುಖವಾಗಿ ಸಂಚರಿಸುವ ಕಾಲಕ್ಕೆ ಉತ್ತರಾಯಣ ಕಾಲವೆಂದು ಕರೆಯುತ್ತಾರೆ. ಇದು ಸಾಮಾನ್ಯವಾಗಿ ಮಾಘಮಾಸದಿಂದ ಭಾದ್ರಪದ ಮಾಸದವರೆಗೆ ಇರುತ್ತದೆ.

ದಕ್ಷಿಣಾಯಣದ ಆರು ತಿಂಗಳ ಸಮಯದಲ್ಲಿ ನಾವು ಮಾಡಿದ ಪಾಪಗಳೆಲ್ಲವೂ ಕ್ರೂರವಾಗಿ ಉತ್ತರಾಯಣದಲ್ಲಿ ಕಾಣಿಸಿಕೊಳ್ಳುವವು. ಅವುಗಳ ಪರಿಹಾರಕ್ಕಾಗಿ ನಾವು ವಿಶೇಷವಾಗಿ ಮಕರ ಸಂಕ್ರಮಣದಂದು ಜಪ, ತಪ, ದಾನಾದಿಗಳಿಗಳಿಂದ ಪರಿಹರಿಸಿಕೊಳ್ಳಬಹುದು.

ಮಕರ ಸಂಕ್ರಮಣ
 ರವಿಯು ಭೂಮಧ್ಯರೇಖೆಗೆ ಉತ್ತರಾಭಿಮುಖವಾಗಿ ಮಕರ ರಾಶಿಯಲ್ಲಿ ಸಂಚರಿಸುವ ಈ ಸಮಯ ಉತ್ತರಾಯಣ ಪುಣ್ಯಕಾಲ ಎನಿಸಿದೆ. ಈ ಸಂಕ್ರಮಣದ ಅಧಿದೇವತೆ ಸೂರ್ಯಾದಿ ದೇವತೆಗಳನ್ನು ಸಂಚರಿಸುವಂತೆ ಮಾಡುವ ಧ್ರುವರಾಯನನ್ನು ತನ್ನ ಕೊಂಡಿಯಲ್ಲಿ ಧರಿಸಿರುವ ಶಿಂಶುಮಾರ ರೂಪೀ ಪರಮಾತ್ಮ. 


ಸಂಕ್ರಮಣಗಳ ಮಹತ್ವ

 ರವಿಸಂಕ್ರಮಣೇ ಪ್ರಾಪ್ತೇ ನ ಸ್ನಾಯಾತ್ ಯಸ್ತು ಮಾನವಃ |
 ಸಪ್ತಜನ್ಮಸು ರೋಗೀ ಸ್ಯಾತ್ ನಿರ್ಧನಶ್ಚೈವ ಜಾಯತೇ ||

ಎನ್ನುವಂತೆ ಸಂಕ್ರಮಣದಂತಹ ಪರ್ವಕಾಲದಲ್ಲಿ ಸ್ನಾನ ಮಾಡದವನು ಏಳು ಜನ್ಮಗಳಲ್ಲಿ ರೋಗಿಯಾಗಿಯೂ, ದರಿದ್ರ ನಾಗಿಯೂ ಹುಟ್ಟುವನು. ಆದುದರಿಂದ ಸಂಕ್ರಮಣದಂತಹ ಪರ್ವಕಾಲಗಳಲ್ಲಿ ಅವಶ್ಯವಾಗಿ ಸ್ನಾನವನ್ನು ಮಾಡಲೇಬೇಕು. ಅಲ್ಲದೇ ಸೂರ್ಯನು ಈ ಕಾಲದಲ್ಲಿ ನಾವು ಮಾಡಿದ ಪುಣ್ಯವನ್ನು ಅನೇಕ ಜನ್ಮಗಳವರೆಗೆ ನಮಗೆ ತಲುಪಿಸುವನು ಎಂದು ಶಾಸ್ತ್ರಗಳಲ್ಲಿ ಹೇಳಿದೆ. ಆದುದರಿಂದ ವಿಶೇಷವಾಗಿ ಸಂಕ್ರಮಣಗಳಂದು ಸ್ನಾನ, ಜಪ, ತಪ, ತರ್ಪಣ ಮುಂತಾದವುಗಳನ್ನು ಅವಶ್ಯವಾಗಿ ಮಾಡಬೇಕು. ಅದರಲ್ಲಿಯೂ ವಿಶೇಷವಾಗಿ ಮಕರ ಸಂಕ್ರಾತಿಯಂದು ಅವಶ್ಯವಾಗಿ ಸ್ನಾನ, ಜಪ, ತಪಾದಿಗಳನ್ನು ಅವಶ್ಯವಾಗಿ ಮಾಡಬೇಕು. 

ಸಂಕ್ರಮಣದ ಪುಣ್ಯಕಾಲ ಎಷ್ಟು ಸಮಯ?
 ಹನ್ನೆರಡು ಸಂಕ್ರಮಣಗಳಲ್ಲಿ ಮೇಷ ಮತ್ತು ತುಲಾ ಸಂಕ್ರಮಣಗಳ ಸಮಯದ ಹಿಂದಿನ ಹಾಗೂ ಮುಂದಿನ ಹತ್ತು ಘಳಿಗೆಗಳು ಪರ್ವಕಾಲ. (ಒಂದು ಘಳಿಗೆ 24 ನಿಮಿಷ).
 ವೃಷಭ, ಸಿಂಹ, ವೃಶ್ಚಿಕ ಮತ್ತು ಕುಂಭ ಸಂಕ್ರಮಣಗಳ ಸಮಯದ ಹಿಂದಿನ ಮತ್ತು ಮುಂದಿನ ಹದಿನಾರು ಘಳಿಗೆಗಳು ಪರ್ವಕಾಲ. ಮಿಥುನ, ಕನ್ಯಾ, ಧನು, ಮೀನ ಸಂಕ್ರಮಣಗಳ ಸಮಯದ ಮುಂದಿನ ಹದಿನಾರು ಘಳಿಗೆಗಳು ಪರ್ವಕಾಲ.
 ಕರ್ಕಾಟಕ ಸಂಕ್ರಮಣದಲ್ಲಿ ಮೊದಲಿನ ಮುವ್ವತ್ತು ಘಳಿಗೆಗಳು ಅತಿ ಪುಣ್ಯತಮ ಕಾಲ ಎಂದೆನಿಸಿದರೆ, ಮಕರ ಸಂಕ್ರಮಣಕ್ಕಾಗುವಾಗ ಸಂಕ್ರಮಣದ ನಂತರದ ನಲವತ್ತು ಘಳಿಗೆಗಳು ಪುಣ್ಯಕಾಲವೆನಿಸಿದೆ.


 ಈ ಹನ್ನೆರಡು ಸಂಕ್ರಮಣಗಳಲ್ಲಿ ವಿಶೇಷವಾಗಿ ಕರ್ಕಾಟಕ ಮತ್ತು ಮಕರ ಸಂಕ್ರಮಣಗಳು ವಿಶೇಷ ಫಲಪ್ರದಗಳಾಗಿವೆ.
 ಈ ನಿಯಮವು ಹಗಲಿನಲ್ಲಿ ಸಂಕ್ರಮಣವಾದರೆ ಮಾತ್ರ ಅನ್ವಯಿಸುತ್ತದೆ. ಒಂದು ವೇಳೆ ರಾತ್ರಿಯಲ್ಲಿ ಸಂಕ್ರಮಣವಾಗುವುದಾರೆ ಅಂದರೆ ರಾತ್ರಿಯಲ್ಲಿ ಸೂರ್ಯನು ಆಯಾ ರಾಶಿಯನ್ನು ಪ್ರವೇಶಿಸುವವನಾದರೆ ಆ ಸಮಯದಲ್ಲಿ ಪುಣ್ಯಕಾಲಗಳ ಆಚರಣೆಯಲ್ಲಿ ವ್ಯತ್ಯಾಸವನ್ನು ಹೇಳಿದ್ದಾರೆ. ಇಂತಹ ಸಮಯದಲ್ಲಿ ಹೇಗೆ ಮಾಡಬೇಕು ಎಂಬ ಸಂಶಯ ಬಂದರೆ, ಆಗ ಕರ್ಕಾಟಕ ಸಂಕ್ರಮಣವು ಸೂರ್ಯಾಸ್ತವಾದ ಮೇಲೆ ಪುನಃ ಮರುದಿನ ಸೂರ್ಯೋದಯವಾಗುವವರೆಗೆ ಯಾವ ಸಮಯದಲ್ಲಾದರೂ ಹಿಂದಿನ ದಿನವೇ ಅಂದರೆ ಆ ದಿನ ಬೆಳಿಗ್ಗೆ ಸೂರ್ಯೋದಯದಿಂದ ಪ್ರಾರಂಭಿಸಿ ಸೂರ್ಯಾಸ್ತದವರೆಗೆ ಪುಣ್ಯಕಾಲ. ಏಕೆಂದರೆ ರಾತ್ರಿಕಾಲದಲ್ಲಿ ಸ್ನಾನ, ದಾನ, ಜಪ, ತಪ, ತರ್ಪಣಾದಿಗಳಿಗೆ ನಿಷೇಧವಿದೆ. ಆದುದರಿಂದ ಆ ದಿನ ಬೆಳಿಗ್ಗೆ ಸಂಕ್ರಮಣ ಅಂಗವಾಗಿ ಸ್ನಾನ, ದಾನಾದಿ ಕಾರ್ಯಗಳನ್ನು ಮಾಡಬೇಕು. ಮಕರ ಸಂಕ್ರಮಣಕ್ಕಾದರೆ ಸೂಯರ್ಾಸ್ತದಿಂದ ರಾತ್ರಿಯ ಯಾವ ಕಾಲದಲ್ಲೇ ಆಗಲಿ ಮರುದಿನ ಸೂರ್ಯೋದಯದ ನಂತರವೇ ಪುಣ್ಯಕಾಲ.
 ಈ ಪುಣ್ಯಸಮಯದಲ್ಲಿ ಎಷ್ಟು ಘಳಿಗೆಗಳು ವಿಶೇಷ ಎಂದರೆ -

 ಯಾಃ ಯಾಃ ಸನ್ನಿಹಿತಾಃ ನಾಡ್ಯಾಃ ತಾಸ್ತಾಃ ಪುಣ್ಯತಮಾ ಮತಾಃ ||

ಎನ್ನುವ ವಾಕ್ಯದಂತೆ ಕರ್ಕಾಟಕ ಸಂಕ್ರಮಣಕ್ಕೆ ಸಮೀಪವಾದ ಹಿಂದಿನ ಇಪ್ಪತ್ತು ಘಳಿಗೆಗಳು ಅಂದರೆ ಎಂಟು ತಾಸು ಅತ್ಯಂತ ಪುಣ್ಯಕರವಾದ ಸಮಯ. ಹಾಗೆಯೇ ಮಕರ ಸಂಕ್ರಮಣಕ್ಕಾಗುವಾಗ ಮುಂದಿನ ಇಪ್ಪತ್ತು ಘಳಿಗೆಗಳು ಅತೀ ಪುಣ್ಯಕರವಾದ ಸಮಯವು.
 ಇಂತಹ ಅತೀ ಪುಣ್ಯಕರವಾದ ಸಮಯದಲ್ಲಿ ಸರ್ವರೂ ಸ್ನಾನ, ದಾನಾದಿಗಳನ್ನು ಅವಶ್ಯವಾಗಿ ಮಾಡಬೇಕು. 

 ಸಂಕ್ರಾಂತೌ ದತ್ತಾನಿ ಹವ್ಯಕವ್ಯಾನಿ ದಾತೃಭಿಃ |
 ತಾನಿ ನಿತ್ಯಂ ದದಾತ್ಯರ್ಕಃ ಪುನರ್ಜನ್ಮನಿ ಜನ್ಮನಿ ||

ಎನ್ನುವ ಪ್ರಮಾಣದಂತೆ ಸಂಕ್ರಮಣದ ಸಮಯದಲ್ಲಿ ಕೊಟ್ಟ ದಾನವು ಅನೇಕ ಜನ್ಮಗಳವರೆಗೆ ನಮ್ಮನ್ನು ತಲುಪುವಂತೆ ಸೂರ್ಯನು ಮಾಡುತ್ತಾನೆ.
 ತಿಲಸ್ನಾಯೀ ತಿಲೋದ್ವರ್ತೀ ತಿಲಹೋಮೀ ತಿಲೋದಕೀ |
 ತಿಲಭುಕ್ ತಿಲದಾತಾ ಚ ಷಟ್ತಿಲಾ ಪಾಪನಾಶಕಾಃ ||

ಎಂದು ಹೇಳಿದಂತೆ ಇಂದು ತಿಲವನ್ನು ಮೈಗೆ ಹಚ್ಚಿಕೊಂಡು ಸ್ನಾನವನ್ನು ಮಾಡುವುದು, ತಿಲದಿಂದ ಕೂಡಿದ ದೀಪವನ್ನು ಹಚ್ಚುವುದು, ತಿಲದಿಂದ ಹೋಮ ಮಾಡುವುದು, ತಿಲಮಿಶ್ರಿತ ಜಲದಿಂದ ಪಿತೃಗಳಿಗೆ ತರ್ಪಣ ಕೊಡುವುದು, ತಿಲಭಕ್ಷಣ, ತಿಲದಾನ ಹೀಗೆ ಆರು ಪ್ರಕಾರಗಳಿಂದ ಎಳ್ಳನ್ನು ಬಳಸುವವನು ಭಾಗ್ಯವಂತನಾಗುವನು ಎಂದು ಶಾಸ್ತ್ರದಲ್ಲಿ ಹೇಳಿರುವುದು.

ಎಳ್ಳಿನ ದಾನ:

 ಈ ದಿನದಂದು ನಾವು ಮಾಡಿದ ಪಾಪಗಳಿಂದ ಒದಗುವ ಕ್ರೂರತೆಯು ನಮ್ಮನ್ನು ಅಪಮೃತ್ಯುವಿಗೆ ಈಡು ಮಾಡಬಹುದು. ಇದರಿಂದ ಪಾರಾಗಲು ಇಂದು ಅವಶ್ಯವಾಗಿ ಎಳ್ಳನ್ನು ದಾನ ಮಾಡಲೇಬೇಕು. ಇಂತಹ ಒಂದು ಪ್ರಮಾಣದ ಪ್ರಕಾರವೇ ನಾವೆಲ್ಲರೂ ಇಂದು ಪರಸ್ಪರವಾಗಿ ಎಳ್ಳನ್ನು, ಅದರೊಡನೆ ಅಪಮೃತ್ಯುಪರಿಹಾರಕವಾದ ಬೆಲ್ಲವನ್ನು ಸೇರಿಸಿ, ದಾನ ಮಾಡುತ್ತೇವೆ. ದಾನ ತೆಗೆದುಕೊಳ್ಳುತ್ತೇವೆ. ಇಂದು ನಮ್ಮ ಸ್ತ್ರೀಯರು ಎಳ್ಳನ್ನು ಬೀರುವುದು ಮಾಡುತ್ತಾರೆ. ಹಾಗೆಯೇ ಕಬ್ಬು, ಬಾರೆ ಹಣ್ಣು ಇವುಗಳನ್ನು ಸೇರಿಸುತ್ತಾರೆ. ಈ ದಿವಸ ಕುಂಬಳಕಾಯಿಯ ದಾನವೂ ವಿಶೇಷ ಫಲಪ್ರದವಾಗಿದೆ. ಹೀಗೆ ಈ ಪುಣ್ಯಕಾಲದಲ್ಲಿ ಮಾಡುವ ಎಲ್ಲಾ ಕಾರ್ಯವು ನಮಗೊದಗುವ ಅಪಮೃತ್ಯುವನ್ನು ಪರಿಹರಿಸಿ, ನಮ್ಮ ಪುಣ್ಯವನ್ನು ವರ್ಧಿಸುವುದು. ಅಲ್ಲದೇ ಈ ಸಮಯದಲ್ಲಿ ಅಧಿಕಾರಿಗಳು ತಮ್ಮ ಪಿತೃದೇವತೆಗಳಿಗೆ ತಿಲತರ್ಪಣವನ್ನು ಅವಶ್ಯವಾಗಿ ಕೊಡಬೇಕು. ಇದು ಮಹಾಲಯದಂತೆ ವಿಹಿತ.

 ಈ ವರ್ಷವೂ ಪುಷ್ಯ ಮಾಸದ ಶುಕ್ಲ ಪಕ್ಷ ತೃತಿಯಾ ದಿ||14-1-2013ರಂದು ಮಧ್ಯಾಹ್ನ 12-05 ಕ್ಕೆ ಸೂರ್ಯನು ಮಕರ ರಾಶಿ ಪ್ರವೇಶಿಸಲಿದ್ದು, ಮಧ್ಯಾಹ್ನ 12-05 ನಿ. ದಿಂದ ಸೂರ್ಯಾಸ್ತದವರೆಗೆ ಉತ್ತರಾಯಣ ಪುಣ್ಯಕಾಲವಿರುವುದು. ಈ ಸಮಯದಲ್ಲಿ ಸರ್ವರೂ ಸ್ನಾನ, ಜಪ, ತಪಗಳನ್ನು, ಅಧಿಕಾರಿಗಳು ಪಿತೃತರ್ಪಣಾದಿಗಳು ಕಾರ್ಯಗಳನ್ನು ಮಾಡಬೇಕು. ಈ ಕಾರ್ಯಗಳು ವಿಶೇಷ ಪುಣ್ಯದಾಯಕಗಳಾಗಿವೆ.

 ಹೀಗೆ ಮಕರ ಸಂಕ್ರಮಣವು ದಾನ, ತರ್ಪಣಾದಿಗಳಿಗೆ ಅತ್ಯುಪಯುಕ್ತವೆಂದೆನಿಸಿದ್ದು, ಸ್ನಾನ, ಜಪಾದಿಗಳಿಂದ ಮಹಾಫಲವು ಸಂಪಾದನೆಯಾಗುವುದು. ವಿಶೇಷವಾಗಿ ಇಂದು ಮಾಡುವ ಆಮಾನ್ನದಾನ, (ಅಕ್ಕಿ), ಕುಂಬಳಕಾಯಿಯ ದಾನಾದಿಗಳಿಂದ ಮಹಾಪುಣ್ಯವು ಲಭ್ಯವಾಗುವುದು. `ಅಯನೇ ಕೋಟಿ ಪುಣ್ಯಂ ಚ` ಎನ್ನುವ ವಾಕ್ಯದಂತೆ ಈ ಕಾಲದಲ್ಲಿ ಮಾಡುವ ಎಲ್ಲಾ ದಾನ, ಕಾರ್ಯಗಳಿಗೆ ಅನಂತಪುಣ್ಯ ದೊರಕುವುದು. ಆದುದರಿಂದಲೇ ಅಲ್ಲವೇ! ಭೀಷ್ಮರು ಉತ್ತರಾಯಣ ಪುಣ್ಯಕಾಲ ಬರುವವರೆಗೆ ಜೀವವನ್ನು ಹಿಡಿದಿದ್ದು ಎಂದ ಮೇಲೆ ಸಾಧಕನಿಗೆ ಸೂಕ್ತ ಕಾಲವಲ್ಲವೇ ಈ ಉತ್ತರಾಯಣ ಪುಣ್ಯಕಾಲ.

--
ರಂಗನಾಥಾಚಾರ್ಯ ಸಾಲಗುಂದಿ, ಸಿಂಧನೂರ

Monday, January 7, 2013

ಆತ್ಮೋಧ್ದಾರದ ಮಾರ್ಗದಲ್ಲಿ ಹೆಜ್ಜೆಗಳು



ಭಗವಂತನ ಆದೇಶದಂತೆ ಈ ಅದ್ಬುತ ಪ್ರಪಂಚವನ್ನು ಸೃಷ್ಠಿಸಿದ ಬ್ರಹ್ಮನು ಅನಂತ ಜೀವರಾಶಿಗಳನ್ನು ಸೃಷ್ಠಿಸಿದರೂ ಸಮಾಧಾನಗೊಳ್ಳದೆ, ಬುದ್ಧಿಯುಳ್ಳ ಮನುಷ್ಯನನ್ನು ಸೃಷ್ಠಿಸಿದ ಮೇಲೆ ತನ್ನ ಸೃಷ್ಠಿಯ ಬಗ್ಗೆ ಸಮಾಧಾನಗೊಂಡ ಎಂದು ಭಾಗವತ ಹೇಳುತ್ತದೆ. ಈ ಜೀವರಾಶಿಗಳೆಲ್ಲಾ ಮನುಷ್ಯ ಜನ್ಮ ಪಡೆದು ಆತ್ಮೋದ್ಧಾರ ಮಾಡಿಕೊಳ್ಳಬಹುದಾಗಿದೆ
ಎಂಬುದೇ ಬ್ರಹ್ಮದೇವರ ಸಮಾಧಾನಕ್ಕೆ ಕಾರಣ.

ಹೀಗೆ ಜೀವರುಗಳು ಮನುಷ್ಯಜನ್ಮ ಪಡೆದುಕೊಂಡು ಆತ್ಮೋದ್ಧಾರ ಮಾಡಿಕೊಂಡ ಉದಾಹರಣೆಗಳನ್ನು ಇತಿಹಾಸ, ಪುರಾಣಗಳಿಂದ ತಿಳಿದುಕೊಂಡಿದ್ದೇವೆ. ಅನೇಕ ಋಷಿ-ಮುನಿಗಳು, ರಾಜರು, ಸಾಧಕರು, ಸಜ್ಜನರು ತತ್ವಜ್ಞ್ಞಾನವನ್ನು ಪಡೆದುಕೊಂಡು ಆತ್ಮೋದ್ಧಾರದ ದಾರಿಯಲ್ಲಿ ನಡೆಯುತ್ತಾ, ಸಾಮಾನ್ಯ ಜನರಿಗೆ ಆ ದಾರಿಯನ್ನು ಪರಿಚಯಿಸಿ, ಆ
ದಾರಿಯಲ್ಲಿ ನಡೆಯುವಂತೆ ಮಾಡಿದ್ದಾರೆ. ಆ ದಾರಿಯನ್ನು ಹುಡುಕುವ ಭರದಲ್ಲಿ ಕೆಲವರು ಅಜ್ಞಾನದಿಂದ ಅಥವಾ ಆಗ್ರಹದಿಂದ ಬೇರೆ-ಬೇರೆ ಮಾರ್ಗಗಳಲ್ಲಿ ಹೊರಟು, ಸಂಸಾರಬಂಧವೆಂಬ ಈ ಜಂಜಾಟದಲ್ಲೆ ಮುಳುಗಿ, ದಾರಿಕಾಣದಂತಾಗಿರುವವರನ್ನು ತಿಳಿದುಕೊಂಡಿದ್ದೆವೆ. ಹೀಗೆ ವೇದ-ಉಪನಿಷತ್ತುಗಳು, ಋಷಿ-ಮುನಿಗಳು ತಿಳಿಸಿಕೊಟ್ಟ ವಿಷಯಗಳು ನಮಗೆ ಅರ್ಥವಾಗಲಿಲ್ಲ. ಇನ್ನು ಕೆಲವರಿಗೆ ಅಪಾರ್ಥಗಳೇ ಆಯಿತು. ಯಾವುದು ಸರಿ - ಯಾವುದು ತಪ್ಪು ಎಂದು ತಿಳಿಯದ ನಮಗೆ ತತ್ವಜ್ಞಾನದ ಮಾರ್ಗದಲ್ಲಿ ಸಾಗಲು ಸರ್ವಙ್ಞರಾದ, ಮುಖ್ಯಗುರುಗಳ ಮಾರ್ಗದರ್ಶನ ಅತ್ಯವಶ್ಯಕ. ಅವರು ತಿಳಿಸಿದ ಆಚಾರ ವಿಚಾರಗಳ ಜ್ಞಾನ ಅತ್ಯವಶ್ಯಕ. ಅದರಂತೆ ನಾವೆಲ್ಲಾ ಈ ಸಂಸಾರಿಕ ಜೀವನದಲ್ಲಿದ್ದುಕೊಂಡು  ನಮ್ಮ ನಮ್ಮ ಆತ್ಮೋದ್ಧಾರ ಮಾಡಿಕೊಳ್ಳಲು ಶ್ರೀಮದಾಚಾರ್ಯರು ತೋರಿಸಿ ತಿಳಿಸಿಕೊಟ್ಟ ಆಚಾರ ವಿಚಾರಗಳ ಬಗ್ಗೆ ತಿಳಿದುಕೊಳ್ಳಲೇ ಬೇಕು. ತಿಳಿದು ಅನುಷ್ಠಾನಕ್ಕೆ ತಂದುಕೊಳ್ಳಬೇಕು.

ಹಾಗಾದರೆ, ಆಚಾರ ಎಂದರೆ ಎನು? 'ವೇದೋಕ್ತ ಕರ್ಮಾಚರಣೆಯೇ ಆಚಾರ'.

|ಕರ್ಮಣಾ ಜ್ಞಾನಮಾತನೋತಿ, ಜ್ಞಾನೇನ ಅಮೃತೀಭವತಿ |

ಸತ್ಕಕರ್ಮಾಚರಣೆಯಿಂದ ನಮ್ಮ ಮನಸ್ಸಿನಲ್ಲಿರುವ ರಾಗ-ದ್ವೇಷಾದಿಗಳೆಲ್ಲಾ ನಾಶವಾಗುತ್ತವೆ. ಶುದ್ಧವಾದ ಮನಸ್ಸಿನಿಂದ ಜ್ಞಾನವನ್ನು ಪಡೆದು ಭಗವಂತನ್ನು ಕಾಣಬಹುದಾಗಿದೆ. ಹೀಗೆ ಆಧ್ಯಾತ್ಮಸಾಧಕನ ಮೊದಲ ಹೆಜ್ಜೆಯೇ ಸತ್ಕರ್ಮಾನುಷ್ಠಾನ.

ಅತೀತಾನಾಗತಜ್ಞಾನಿ ತ್ರೈಲೋಕ್ಯೋದ್ಧರಣ ಕ್ಷಮಃ |
ಏತಾದೃಶೊಪಿನಾಚಾರಂ ಶ್ರೌತಂ ಸ್ಮಾರ್ತಂ ಪರಿತ್ಯಜೇತ್ ||

ಭೂತ ಭವಿಷ್ಯತ್ ಗಳನ್ನು ತಿಳಿಯುವ ಜ್ಞಾನಿಯಾಗಿದ್ದು, ಮೂರು ಲೋಕಗಳನ್ನು ಉದ್ಧಾರ ಮಾಡುವ ಸಾಮಥ್ರ್ಯವುಳ್ಳವನಾಗಿದ್ದರೂ, ಶ್ರುತಿ-ಸ್ಮೃತಿಗಳಲ್ಲಿ ಹೇಳಿದ ಆಚಾರಗಳನ್ನು ಬಿಡಬಾರದು ಎಂದಿರುವಾಗ ಕರ್ಮಾಚರಣೆ ಅವಶ್ಯ ಕರ್ತವ್ಯ ಎಂದಾಯಿತು.

ಆಚರಣೆಗಳಲ್ಲಿ ಮೊದಲನೆಯದು ಸಂಧ್ಯಾವಂದನೆ.
  | ಸಂಧ್ಯಾಹೀನೋ ಅಶುಚಿರ್ನಿತ್ಯಂ, ಅನರ್ಹಃ ಸರ್ವಕರ್ಮಣಃ |
  | ಅನರ್ಹಃ ಕರ್ಮಣಾಂ ವಿಪ್ರಃ ಸಂಧ್ಯಾಹೀನೋ ಯತಃ ಸ್ಮೃತಃ ||

ಸಂಧ್ಯಾವಂದನೆ ಮಾಡದವನು ಯಾವಾಗಲೂ ಮೈಲಿಗೆಯೇ. ಯಾವ ಕರ್ಮಗಳಿಗೂ ಅರ್ಹನಲ್ಲ. ಬ್ರಾಹ್ಮಣನ ಕರ್ತವ್ಯಗಳಾದ ಯಙ್ಞ, ಪೂಜೆ, ಆಶೀರ್ವಾದಗಳಿಗೂ ಅಯೋಗ್ಯ ಎಂದು ಶಾಸ್ತ್ರ ಎಚ್ಚರಿಸಿದೆ. ಭಗವತ್ಪ್ರಸಾದ ರೂಪವಾದ ಊಧ್ರ್ವ-ಪುಂಡ್ರಧಾರಣೆ, ದೇವರ ಉಪಕಾರಸ್ಮರಣೆ ರೂಪವಾದ ಅಘ್ರ್ಯ ಇದು ಪಾಪ-ಪರಿಹಾರಕ. ಮತ್ತು ನಮ್ಮ ಬುಧ್ಧಿಗಳನ್ನು ಸನ್ಮಾರ್ಗದಲ್ಲಿ ಪ್ರಚೋದಿಸು ಎಂದು ಪ್ರಾರ್ಥನಾರೂಪವಾದ ಗಾಯತ್ರಿ ಜಪ, ಮುಂತಾದ ಪ್ರಮುಖ ಅಂಶಗಳಿಂದ ಕೂಡಿದ ಸಂಧ್ಯಾವಂದನೆ ಬ್ರಾಹ್ಮಣನಿಗೆ ಅತ್ಯವಶ್ಯ ಕರ್ತವ್ಯ. ಹಾಗೆಯೇ ದೈಹಿಕ-ಮಾನಸಿಕ ಸ್ವಾಸ್ಥ್ಯಕ್ಕಾಗಿ ಪ್ರಾಣಾಯಾಮ-ಧ್ಯಾನಗಳನ್ನು ಮಾಡಬೇಕೆಂಬುದು ಆಧುನಿಕರೂ ಒಪ್ಪುವ ವಿಚಾರವೇ. ಅದನ್ನು ನಮ್ಮ ಪ್ರಾಚೀನರು ಧ್ಯಾನಕ್ಕೆ ಸರ್ವಶ್ರೇಷ್ಟಮಂತ್ರ ಗಾಯತ್ರಿಯಿಂದ ಕೂಡಿದ  ಸಂಧ್ಯಾವಂದನೆಯನ್ನು ನಮಗೆ ವಿಧಿಸಿದ್ದು. ಇಂತಹ ಧ್ಯಾನರೂಪವಾದ ಸಂಧ್ಯಾವಂದನೆಯಿಂದ ಮನಸ್ಸು ಪ್ರಶಾಂತವಾಗಿ, ಬುದ್ಧಿ-ಶರೀರಗಳು ಬಲಿಷ್ಟವಾಗಿ ಮಾಡಬೇಕಾದ ಕಾರ್ಯಗಳನ್ನು ಸುಲಭವಾಗಿ ಅನಾಯಾಸವಾಗಿ ಮಾಡಲುಬರುತ್ತದೆ.

ಹೀಗೆ ಶಾಸ್ತ್ರಸಿದ್ಧವಾಗಿಯೂ, ಮಹದುಪಕಾರ ರೂಪವಾಗಿಯೂ ಇರುವ ಸಂಧ್ಯಾವಂದನೆಯನ್ನು ಅತ್ಯವಶ್ಯ ಮಾಡಲೇಬೇಕು.
ಹಾಗೆಯೇ ಧಾರ್ಮಿಕ ಕರ್ಮಾಚರಣೆಯಿಲ್ಲದೇ ಕೇವಲ ಜ್ಞಾನ ಪಡೆದುಕೊಂಡಿದ್ದರೂ ಪ್ರಯೊಜನವಿಲ್ಲ.
ಆಚಾರವಿಲ್ಲದ ಜ್ಞಾನ, ಭಗವತ್ಪ್ರಙೆ ಇಲ್ಲದ ಆಚಾರ - ಎರಡೂ ಕೂಡ ಆತ್ಮೋದ್ಧಾರ ಮಾರ್ಗಗಳಾಗುವುದಿಲ್ಲ.
ಆಚಾರ್ಯರು ತಿಳಿಸಿದಂತೆ ನಮ್ಮ ನಿತ್ಯಕರ್ಮಗಳಾದ ಸಂಧ್ಯಾವಂದನಾದಿಗಳನ್ನು ಮಾಡುವಾಗ ಭಗವತ್ ಪ್ರಙ್ಞೇ ಅಂದರೆ ವಿಷ್ಣುವಿನಲ್ಲಿ ಉತ್ತಮತ್ವ ಜ್ಞಾನ-ಭಕ್ತಿಗಳು ಇರಬೇಕು.

...ಯೇತು ತದ್ಭಕ್ತಿವರ್ಜಿತಾಃ |
ಅನ್ಯಸಾಮಾನ್ಯವೇತ್ತಾರಃ ತದನ್ಯೋತ್ತಮವೇದಿನ:
ತದ್ಬಕ್ತನಿಂದಕಾಶ್ಚೈವ ಯಾಂತ್ಯೇವನಿರಯಂ ಧೃವಂ |
ಅಪಿ ಧರ್ಮೈಕನಿಯಮ್ನ: ನಾತ್ರ ಕಾರ್ಯವಿಚಾರಣಾ ||


ವಿಷ್ಣುವಿನಲ್ಲಿ ಭಕ್ತಿ ಇಲ್ಲದವರು ಅಥವಾ ಇತರ ದೇವತೆಗಳ ಸಮನಾದವನು ವಿಷ್ಣು ಎಂದು ತಿಳಿದವರು ಅಥವಾ ವಿಷ್ಣುನಿಂದಕರು, ಇವರು ಧಾರ್ಮಿಕ ನಿಷ್ಠೆಯಿಂದ ಕೂಡಿದ್ದರೂ ಅನರ್ಥವನ್ನು ಹೊಂದುತ್ತಾರೆ.

ಆದ್ದರಿಂದ ಆಚಾರ್ಯರ ಸಿಧ್ಧಾಂತದ ಮಾರ್ಗದಲ್ಲಿ ಆಚಾರ ವಿಚಾರಗಳ  ಅಳವಡಿಸಿಕೊಂಡು ತತ್ವಜ್ಞಾನ ಪಡೆಯುವಲ್ಲಿ ಸಣ್ಣ ಪ್ರಯತ್ನ ಪಟ್ಟರೂ ಆತ್ಮೋದ್ಧಾರಮಾರ್ಗದಲ್ಲಿ ಸಾಗಲು ಒಂದು  ಸಣ್ಣ ಹೆಜ್ಜೆ ಇಟ್ಟಂತಾಗುತ್ತದೆ. ಅದಕ್ಕಾಗಿ ನಾವೆಲ್ಲಾ ಪ್ರಯತ್ನಿಸೋಣ.
ಶ್ರೀಕೃಷ್ಣಾರ್ಪಣಮಸ್ತು.


ಲೇಖಕರು:
ನಾರಾಯಣಾಚಾರ್ಯ ಬಾದರ್ಲಿ,
ಆಧ್ಯಾಪಕರು,
ಪೂರ್ಣಪ್ರಙ್ಞ ವಿದ್ಯಾಪೀಠ, ಬೆಂಗಳೂರು

Thursday, January 3, 2013

ಶ್ರೀ ಮದ್ಭಾಗವತದಲ್ಲಿ ಉಲ್ಲೇಖಿಸಲಾದ ಭಗವಂತನ ಅವತಾರಗಳು (2,3ನೇ ಅವತಾರ)


(ಮುಂದುವರೆದ ಭಾಗ)
2ನೇ ಅವತಾರ:
 
ದ್ವಿತೀಯಂ ತು ಭವಾಯಸ್ಯ ರಸಾತಲಗತಾಂ ಮಹೀಮ್|
ಉದ್ದರಿಷ್ಯನ್ನು ಪಾದತ್ತ ಯಜ್ಞೇಶಃ ಸೌಕರಂ ವಪ್ರಃ ||
                                  ಭಾಗವತ 1-3-7


ಈ ಎರಡನೇ ಅವತಾರ ಯಾವುದೇಂದರೆ ಅದು ವರಾಹ ಅವತಾರ ಎನ್ನುತ್ತದೆ. ಭಾಗವತ ನಮಗೆ ಗೊತ್ತಿರುವಹಾಗೆ ವೈವಸ್ವತ ಮನ್ವಂತರದಲ್ಲಿ ಆದ ದಶಾವತಾರಗಳಲ್ಲಿ ವರಾಹಾವತಾರ 3ನೇಯದು. (ಮತ್ಸ-ಕೂರ್ಮ-ವರಾಹ) ಆದರೆ ಭಾಗವತದ ಪ್ರಕಾರ ಸ್ವಾಯಂಭುವ ಮನ್ವಂತರದಲ್ಲಿ ಆದ ಎರಡನೇ ಅವತಾರ ವರಾಹಾವತಾರ. ಈ ಅವತಾರದ ಉದ್ದೇಶವೇನೆಂದರೆ ಆದಿ ದೈತ್ಯನಾದ ಹಿರಣ್ಯಾಕ್ಷನು ಈ ಭೂಮಿಯನ್ನು ನಾಶಪಡಿಸುವ ಉದ್ದೇಶದಿಂದ ಅದನ್ನು ಕಕ್ಷೆಯಿಂದ ತಪ್ಪಿಸಿ ರಸಾತಲಕ್ಕೆ ತೆಗೆದುಕೊಂಡುಹೋದಾಗ, ಆಗ ಸ್ವಾಯಂಭೂವಮನು ಬ್ರಹ್ಮದೇವರನ್ನು ರಕ್ಷಿಸುವಂತೆ ಪ್ರಾರ್ಥಿಸಿಕೊಂಡಾಗ, ಬ್ರಹ್ಮದೇವನ ಮೂಗಿನಿಂದ, ಸಣ್ಣರೂಪದಿಂದ ಹೊರಬಂದ ವರಾಹ ರೂಪದ ಶ್ರೀಹರಿ, ಹಿರಣ್ಯಾಕ್ಷನನ್ನು ಕೊಂದು ಭೂಮಿಯನ್ನು ಮತ್ತೆ ಅದರ ಕಕ್ಷೆಯಲ್ಲಿ ನಿಲ್ಲಿಸಿದ ರೂಪ. ಈ ಹಿರಣ್ಯಾಕ್ಷ ದಿತಿ-ಕಶ್ಯಪರ ಮಗನಲ್ಲ, ಬ್ರಹ್ಮನಪುತ್ರ. ಇದೇ ಆದಿ ಹಿರಣ್ಯಾಕ್ಷನೇ ಮುಂದೆ ವೈವಸ್ವತ ಮನ್ವಂತರದಲ್ಲಿ ದಿತಿ-ಕಶ್ಯಪರ ಮಗನಾಗಿ ಜನಿಸಿ ಮತ್ತೇ ಭೂಮಿಯನ್ನು ಕಕ್ಷೆಯಿಂದ ತಪ್ಪಿಸಿ ನಾಶಪಡಿಸಲು ಯತ್ನಿಸಿದಾಗ ಇದೇ ವರಾಹ ರೂಪದಿಂದ ಶ್ರೀ ಹರಿ ಅವನನ್ನ ಕೊಂದದ್ದು. ಹೀಗೆ ಹಿರಣ್ಯಾಕ್ಷನಿಗೆ ಸ್ವಾಯಂಭುವ ಮನ್ವಂತರದಲ್ಲಿ ಹಾಗೂ ವೈವಸ್ವತ ಮನ್ವಂತರದಲ್ಲಿ ಎರಡು ಬಾರಿ ಜನನ. ಆದರೆ ವೈವಸ್ವತ ಮನ್ವಂತರದಲ್ಲಿ ಮತ್ತೆ ವರಹವತಾರ ಇಲ್ಲ. ಸ್ವಾಯಂಭುವ ಮನ್ವಂತರದಲ್ಲಿ ತಾಳಿದ ವರಾಹಾವತಾರದಿಂದಲೇ ಎರಡೂ ಬಾರಿಯೂ ಹಿರಣ್ಯಾಕ್ಷನ ಸಂಹಾರ ನಡೆದಿದೆ. ಆದುದರಿಂದ ಭಾಗವತ , ವೈವಸ್ವತ ಮನ್ವಂತರದಲ್ಲಿ ವರಾಹಾವತಾರವನ್ನು ಪರಿಗಣಿಸುವುದಿಲ್ಲ. ಕಾಲಾನುಕ್ರಮದ ಪ್ರಕಾರ ಸ್ವಾಯಂಭುವ ಮನ್ವಂತರದಲ್ಲಿ ಆದ ಈ ವರಾಹಾವತಾರವನ್ನೇ  ಎರಡನೇ ಅವತಾರ ಎಂದು ಪರಿಗಣಿಸುತ್ತದೆ. ಈ ರೂಪಕ್ಕೆ ಯಜ್ಞ ವರಾಹ ಎಂದು ಕರೆಯುತ್ತಾರೆ  ಏಕೆಂದರೆ ಯಜ್ಞ ವರಾಹ ರೂಪದಲ್ಲಿ ತನ್ನ ರೋಮಕೂಪದಿಂದ ಯಜ್ಞಕ್ಕೆ ಬೇಕಾಗುವ ಧಭೆ ಮುಂತಾದ ಸಲಕರಣೆಗಳನ್ನು ಸೃಷ್ಟಿಸಿದ ಎಂದು ಭಾಗವತ ನಮಗೆ ತಿಳಿಸಿಕೊಡುತ್ತದೆ.


3ನೇ ಅವತಾರ:
ತೃತೀಯಂ ಋಷಿಸರ್ಗಂ ವೈ ದೇವರ್ಷಿತ್ವಮುಪೇತ್ಯ ಸಃ |
ತತ್ರ ಸಾತ್ವತಮಾಚಷ್ಟ ನೈಷ್ಕಮ್ರ್ಯಂ ಕರ್ಮಣಾಂ ಯತಃ||

 
ಈ ಮೂರನೇ ಅವತಾರದ ಬಗ್ಗೆಯೂ ಸಹ ಶ್ರೀ ಮದಾಚಾರ್ಯರು ಅವತಾರ ಮಾಡಿ ತಿಳಿಸಿಕೊಡುವ ವರೆಗೂ ಇತರೆ ಭಾಗವತ ವ್ಯಾಖ್ಯಾನಕಾರರಿಗೆ ಈ ಅವತಾರ ಯಾವುದು ಎಂದು ತಿಳಿದಿರಲಿಲ್ಲ. ಈ ಮೇಲಿನ ಶ್ಲೋಕದಲ್ಲಿ ಕಂಡುಬರುವಂತೆ ದೇವರ್ಷಿ ಎಂದರೆ ಋಷಿಯಾಗಿ ಅವತಾರಮಾಡಿ ದೇವತೆಗಳಿಗೆ ಋಷಿಯಾದ ಎಂದು ತಿಳಿದು ದೇವತೆಗಳಿಗೆ ಋಷಿ ಎಂದರೆ ನಾರದರು ಎಂದು ವ್ಯಾಖ್ಯಾನ ಮಾಡಿರುತ್ತಾರೆ. ಆದರೆ ನಾರದರು ಭಗವಂತನ ಅವತಾರ ಅಲ್ಲ. ನಾರದರಲ್ಲಿ ಭಗವಂತನ ವಿಶೇಷ ಸನ್ನಿಧಾನ ವಿರಬಹುದು. ಆದರೆ ಭಗವಂತನ ಅವತಾರವಲ್ಲ ಎಂದು ಆಚಾರ್ಯರು ತಿಳಿಸಿಕೊಟ್ಟರು. ಈ ದೇವರ್ಷಿ ದೇವತಗಳಿಗೆ ಉಪದೇಶ ಮಾಡಿದ ಹಾಗೂ ದೇವತೆಗಳ ಋಷಿ ನಾರದರಿಗೂ ಸಹ ಉಪದೇಶಮಾಡಿದ ಭಗವಂತನ ರೂಪ ಒಂದಿದೆ. ಅದು ಯಾವುದೆಂದರೆ ಐತರೇಯ ರೂಪ ಎಂದು ತಿಳಿಸಿದರು. ಶ್ರೀ ಮದಾಚಾರ್ಯರು ಬಂದು ಭಾಗವತಕ್ಕೆ ತಾತ್ಪರ್ಯ ಬರೆಯುವವರಿಗೂ ಇತರೆ ಯಾವುದೇ ವ್ಯಾಖ್ಯಾನಕಾರಕರಿಗೆ ಈ ವಿಷಯ ತಿಳಿದಿರಲಿಲ್ಲ. ಎಲ್ಲರೂ  ನಾರದನೇ ಭಗವಂತನ ಅವತಾರ ಎಂದು ಬರದಿದ್ದಾರೆ. ಶ್ರೀ ಮದಾಚಾರ್ಯರು ಪ್ರಬಲವಾದ ಪ್ರಮಾಣಗಳನ್ನು ಕೊಟ್ಟು ಇದು ನಾರದರ ಅವತಾರವಲ್ಲ ಇದು ಐತರೇಯ ರೂಪ ಎಂದು ಸ್ಟಷ್ಟ ಪಡಿಸಿದರು. ಈ ರೂಪದಿಂದ ಸಾತ್ವಿಕವಾದ ವೈಷ್ಣಧರ್ಮವನ್ನು ನಾರದಾದಿಗಳಿಗೆ ಉಪದೇಶಮಾಡಿದ ಅಷ್ಟೇ ಅಲ್ಲ ಐತರೇಯ ಬ್ರಾಹ್ಮಣ, ಐತರೇಯ ಆರಣ್ಯಕ ಮತ್ತು ಐತರೇಯ ಉಪನಿಷತ್ತು ಎಂಬ ವೇದಭಾಗವನ್ನು ಆವಿಷ್ಕಾರಗೊಳಿಸಿದ ರೂಪ. ಇದರಿಂದಾಗಿ ಎಲ್ಲ ಕರ್ಮಗಳು ಸಹ ಕರ್ಮಬಂಧನವನ್ನು ಕಳಚುವುದುಕ್ಕೆ ಸಾದನವಾದವು. ಕರ್ಮದಿಂದ ನೈಷ್ರ್ಕಮ್ಯವನ್ನು- ಮುಕ್ತಿಯನ್ನು ಪಡೆಯಲು ಸಾಧನವಾಯಿತು, ಕರ್ಮದಿಂದ ಜ್ಞಾನ-ಜ್ಞನದಿಂದ ಅಮೃತತ್ವವನ್ನು ಪಡೆಯಲು ಸಾಧ್ಯವಾಯಿತು. ಇಂತಹ ಅಪೂರ್ವವಾದ ಜ್ಞಾನ ಮಾರ್ಗವನ್ನು ಐತರೇಯ ರೂಪದಿಂದ ಉಪದೇಶಿಸಿದ.  

 ಈ ಐತರೇಯನ ಬಗ್ಗೆ ಭಾಗವತದಲ್ಲಿ ಈತನ ಕಥೇಯನ್ನೇ ಹೇಳುವುದಿಲ್ಲ. ಈತ ಒಬ್ಬ ದೇವರ್ಷಿ ಎಂದಷ್ಟೇ ಉಲ್ಲೇಖ ಮಾಡಿರುತ್ತದೆ. ಆದರೆ ಈ ಐತರೇಯನ ಬಗ್ಗೆ ಬೇರೆ ಪುರಾಣಗಳಲ್ಲಿ ಒಂದು ರೋಚಕವಾದ ಕಥೆ ಇದೆ.
 ಐತರೇಯನ ತಂದೆ ವಿಶಾಲ ಅನ್ನುವ ಒಬ್ಬ ಋಷಿ ಅವನಿಗೆ ಇಬ್ಬರು ಹೆಂಡತಿಯರಿದ್ದರು. ಮೊದಲನೇ ಹೆಂಡತಿಗೆ ಕೆಲವು ಮಕ್ಕಳಿದ್ದರು. ಎರಡನೇ ಹೆಂಡತಿಯ ಮಗನೇ ಐತರೇಯ. ಈ ಎರಡನೇ ಹೆಂಡತಿಯನ್ನು ವಿಶಾಲ ನಾಮಕ  ಋಷಿ ಅಷ್ಟಾಗಿ ಪ್ರೀತಿಸುತ್ತಿರಲಿಲ್ಲ. ತಾತ್ಸಾರದಿಂದ ನೋಡಿಕೊಳ್ಳುತ್ತಿದ್ದ ಮೊದಲನೇ ಹೆಂಡತಿಯ ಮಕ್ಕಳು ಚೆನ್ನಾಗಿ ವೇದಾಧ್ಯಯನ ಮಾಡಿ ತಂದೆಯ ಜೊತೆಗೆ ವೇದ ವಿದ್ಯಪಡೆದು ದೊಡ್ಡ ಪಂಡಿತರಾಗಿಬಿಟ್ಟಿದ್ದರು. ಈ ಎರಡನೇ ಹೆಂಡತಿಗೆ ಹುಟ್ಟಿದ ಮಗು ಹುಟ್ಟಿದಾಗಿನಿಂದ ಬಹಳ ಹಠ ಎಂದರೆ ಹಠ. ಸದಾ ಅಳುತ್ತಿತ್ತಂತೆ. ಇದನ್ನು ತಡೆದುಕೊಳ್ಳಲು ಸಾಧ್ಯವಾಗದೆ .ಒಮ್ಮೆ ಅವನ ತಾಯಿ ಆ ಮಗುವಿಗೆ ಬಾಯಿ ಮುಚ್ಚುತ್ತಿಯೋ? ಇಲ್ಲವೋ? ಎಂದು ಗದರಿಸಿದಳಂತೆ. ತಕ್ಷಣ ಆ ಮಗು ಬಾಯಿ ಮುಚ್ಚಿಕೊಂಡು ಬಿಟ್ಟಿತಂತೆ. ಮತ್ತೆ ಬಾಯಿ ತೆಗೆಯಲೇ ಇಲ್ಲ. ಮಾತನಾಡಲೇ ಇಲ್ಲ. ಸದ್ಯಕ್ಕೆ ಆಕೆಗೆ ಆರಾಮ ಎನ್ನಿಸಿತು. 

  ಮೊದಲನೇ ಹೆಂಡತಿಯ ಮಕ್ಕಳು ತಂದೆಯ ಜೊತೆಗೆ ಯಜ್ಞ ಯಗಾದಿಗಳನ್ನು ಮಾಡಿಸುವುದಕ್ಕೆ ಹೊರಗೆ ಹೋಗುತ್ತಿದ್ದರು. ಈ ಮಗುವಿಗೆ ಬಾಯಿ ಇರುವುದಿಲ್ಲ ಎಂದು ತಿಳಿದು ಅದನ್ನು ಮನೆಯಲ್ಲೇ ಬಿಟ್ಟು ಹೋಗುತ್ತಿದ್ದರು. ಇತರೆ ಮಕ್ಕಳು ತಂದೆ ಒಟ್ಟಿಗೆ ಹೋಗಿ ಬೇಕಾದಷ್ಟು ಸಂಭಾವನೆ ಪಡೆದು ಖ್ಯಾತರಾದರು. ಈ ಮಗು ಸುಮಾರು 8-10 ವರ್ಷಗಳಾಗುವುವರೆಗೆ ಮಾತೇ ಅಡಲಿಲ್ಲ.

ಹೀಗೇ ಒಂದು ದಿನ ತಾಯಿ ಕಣ್ಣೀರಿಡುತ್ತಾ ಆ ಮಗುವನ್ನು ಕುರಿತು ನಿನಗೆ ಮಾತನಾಡಲಾದರೂ ಬಂದಿದ್ದರೆ ನೀನು ಅಪ್ಪನ ಸಂಗಡ ಹೋಗಿ ಪೌರೋಹಿತ್ಯ ಮಾಡಿ ಮಂತ್ರಗಳನ್ನಾದರೂ ಹೇಳಿ ಸಂಭಾವನೆ ಪಡೆಯಬಹುದಿತ್ತು. ನಿನಗೆ ಅದೂ ಇಲ್ದೇ ಹೋಯಿತು ಎಂದು ಹೇಳಿದಳಂತೆ. ತಕ್ಷಣ ಆ ಮಗು ಅಮ್ಮಾ  ನೀನು ಮಾತನಾಡು ಎಂದರೆ ನಾನು ಮಾತಾಡುತ್ತೇನೆ. ನೀನು ಬಾಯಿ ಮುಚ್ಚು ಅಂತ ಹೇಳಿದಕ್ಕೆ ನಾನು ಬಾಯಿ ಮುಚ್ಚಿದೆ. ನನಗೆ ಮಾತನಾಡಲಿಕ್ಕೆ ಬರುತ್ತೆ. ನಾನು ವೇದ ಮಂತ್ರಗಳನ್ನು ಹೇಳಬಲ್ಲೆ ಎಂದು ಹೇಳಿದಾಗ ಆ ತಾಯಿಗೆ ಸಂತೋಷವೋ ಸಂತೋಷ. ಆಗ ಆ ತಾಯಿ ಮಗುವಿಗೆ ನಿಮ್ಮ ತಂದೆ ಯಜ್ಞ ಮಾಡಿಸಲು ಹೋಗಿದ್ದಾರೆ ಅಲ್ಲಿ ಪಕ್ಕದ ರಾಜನೊಬ್ಬ ಯಜ್ಞ ಮಾಡಿಸುತ್ತಿದ್ದಾನೆ. ನೀನು ಅಲ್ಲಿಗೆ ಹೋಗು ಎಂದು ಹೇಳಿದಳು. ಆಗ ಐತರೇಯ ಆಯ್ತಮ್ಮ ಹೋಗುತ್ತೇನೆ ಎಂದು ಹೇಳಿ ಆ ಯಜ್ಞ ನಡೆಯುತ್ತಿರುವ ಸ್ಥಳಕ್ಕೆ ಹೋದನಂತೆ. ಅಲ್ಲಿ ಅವನ ತಂದೆ ಮತ್ತು ಅಣ್ಣಂದಿರು ವೇದ ಮಂತ್ರಗಳನ್ನು ಪಠಿಸುತ್ತಾ ಯಜ್ಞ ಮಾಡಿಸುತ್ತಿದ್ದರು. ತಂದೆಗೆ ಇವನು ಅಲ್ಲಿಗೆ ಬಂದಿದ್ದು ಇಷ್ಟವಾಗಲಿಲ್ಲ. ಇವನೇಕೆ ಇಲ್ಲಿಗೆ ಬಂದ ಇವನಿಂದ ನನ್ನ ಮರ್ಯಾದೆ ಹೋಗುತ್ತದೆ ಎಂದು ಯೋಚಿಸತೊಡಗಿದನಂತೆ. ಈ ಐತರೇಯ, ಇನ್ನು 8-10 ವರ್ಷದ ಮಗು, ತಂದೆಯ ತೊಡೆಯ ಮೇಲೆ ಕೂಡಲು ಹೋದ. ಆಗ ಆ ತಂದೆ ಅವನನ್ನು ತಳ್ಳಿಬಿಟ್ಟನಂತೆ ,ಇದನ್ನು ಕಂಡು ಭೂದೇವಿಗೆ ಬಹಳ ಸಿಟ್ಟು ಬಂದಿತು. ಆಗ ಭೂಮಿಯಿಂದ ಒಂದು ಆಸನ ಮೇಲೆದ್ದು ಬಂದಿತಂತೆ ಆಗ ಆ ಹುಡುಗ ಆ ಆಸನದಲ್ಲಿ ಕುಳಿತು ನಿಸರ್ಗಳವಾಗಿ ವೇದ ಮಂತ್ರಗಳನ್ನು ಪ್ರವಚನ ಮಾಡಲಾರಂಭಿಸಿದ. 40 ಅಧ್ಯಾಯಗಳ ಐತರೇಯ ಬ್ರಾಹ್ಮಣ, 14 ಅಧ್ಯಾಯಗಳ ಐತರೇಯ ಅರಣ್ಯಕ, ಅದರಲ್ಲಿ ಕೊನೆಯ 9 ಅಧ್ಯಾಯಗಳ ಐತರೇಯ ಉಪನಿಷತ್ತಗಳನ್ನು ಪ್ರವಚನ ಮಾಡಿದನಂತೆ. ಈ ಪ್ರವಚನವನ್ನು ಕೇಳಲು ಸಾಕ್ಷಾತ್ ಲಕ್ಷೀದೇವಿ ಬಂದು ಅಲ್ಲಿ ಕೂತು ಪ್ರವಚನ ಕೇಳಿದಳಂತೆ. ಅಲ್ಲದೇ ಬ್ರಹ್ಮ ರುದ್ರಾದಿ ದೇವತೆಗಳೆಲ್ಲರೂ ಆ ಪ್ರವಚನ ಕೇಳಲು ಅಲ್ಲಿ ಬಂದು ನೆರೆದರು. 

 ಹೀಗೆ ಮಹಿ ಅಂದರೆ ಭೂಮಿ. ಮಹಿಯಿಂದ ದತ್ತವಾದ ಆಸನದಲ್ಲಿ ಕುಳಿತಿದ್ದರಿಂದ ಐತರೇಯನಿಗೆ ಮಹಿದಾಸ ಎಂಬ ಹೆಸರು ಬಂದಿತು. ಅಲ್ಲದೆ ಮಹಾಮಹಿಮರಾದ ಲಕ್ಷ್ಮಿ ಬ್ರಹ್ಮರುದ್ರಾದಿ ದೇವತೆಗಳು ಅಲ್ಲಿಗೆ ಬಂದು ಅವನ ದಾಸರಾಗಿ ಪ್ರವಚನ ಕೇಳಿದ್ದರಿಂದಲೂ ಸಹ ಅವನು ಮಹಿದಾಸನಾದ. 
 ನಂತರದಲ್ಲಿ ಅವನು ಮನೆಗೆ ಹೋದಮೇಲೆ ಇವನನ್ನು ತಾತ್ಸಾರ ಮಾಡುತ್ತಿದ್ದ ಅವನ ಮಲತಾಯಿ ಪಶ್ಚಾತ್ತಾಪದಿಂದ ಅವನನ್ನು ಸಂತೋಷದಿಂದ ಆಲಂಗಿಸಿಕೊಂಡು ನಿನ್ನ ಮುಂದೆ ನನ್ನ ಮಕ್ಕಳು ಯಾವ ಮಹಾ ಬುದ್ದಿವಂತರಪ್ಪಾ ಎಂದು ಹೇಳಿ ತನ್ನಿಂದ ನಡೆದ ತಪ್ಪಿಗಾಗಿ ಪರಿತಪಿಸಿದಳಂತೆ. 
 ಇಂತಹ ಅಪೂರ್ವ ಪ್ರಸಂಗವನ್ನು ಎಲ್ಲ ವ್ಯಾಖ್ಯಾನಕಾರರು ಕೈ ಬಿಟ್ಟು ಬಿಟ್ಟಿದ್ದರು. ಮತ್ತು ನಾರದರನ್ನು ಭಗವಂತನ ಅವತಾರ ಎಂದು ವ್ಯಾಖ್ಯಾನ ಬರೆದರು. ಆದರೆ ಶ್ರೀಮದಾಚಾರ್ಯರು ಮಾತ್ರ,. ಇಂದೊಂದೇ ಅಲ್ಲ, ಇಂತಹ ಎಷ್ಟೋ ಅಪೂರ್ವ ಪ್ರಸಂಗಗಳನ್ನು ಸರಿಯಾದ ಆಧಾರ ಪ್ರಮಾಣಗಳಿಂದ ಉಲ್ಲೇಖಿಸಿ ಬೆಳಕಿಗೆ ತಂದು ಸಾಧಕರಿಗೆ ಜಜ್ಞಾಸುಗಳಿಗೆ ಮಹದುಪಕಾರ ಮಾಡಿರುತ್ತಾರೆ.
ಆಚಾರ್ಯ ಶ್ರೀಮದಾಚಾರ್ಯ ಸಂತುಮೇ ಜನ್ಮ ಜನ್ಮನೀ

        ...ಮುಂದುವರೆಯುವುದು

ಕೆ. ಸತ್ಯನಾರಾಯಣ ರಾವ್
ಈಶಾವಾಸ್ಯಂ
ವಿವೇಕಾನಂದ ನಗರ
ಹೊಸಪೇಟೆ.